ಉಡುಪಿ: ಬೈಕ್ ಹಿಂದೆ ನಾಯಿಯನ್ನು ಕಟ್ಟಿ ಎಳೆದೊಯ್ದ ವ್ಯಕ್ತಿ; ದಾಖಲು ನಾಯಿಯನ್ನು ಸುಮಾರು ಆರು ಕಿಲೋಮೀಟರ್ ವರೆಗೆ ಎಳೆದೊಯ್ದ ಆರೋಪಿ ಅಬ್ದುಲ್ ಖಾದರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಉಡುಪಿ: ಉಡುಪಿಯಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದರು.ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಶನಿವಾರ ಈ ಘಟನೆ ನಡೆದಿತ್ತು. ನಾಯಿಯನ್ನು ಸುಮಾರು ಆರು ಕಿಲೋಮೀಟರ್ ವರೆಗೆ ಎಳೆದೊಯ್ದ ಆರೋಪಿ ಅಬ್ದುಲ್ ಖಾದರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.ಶಿರ್ವ ಗ್ರಾಮ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಘಟನೆ ನಡೆದಿದೆ. ಪ್ರಾಣಿ ದಯಾ ಸಂಘದ ಸದಸ್ಯೆ ಮಂಜುಳಾ ಕರ್ಕೇರ ಅವರು ಬೆಳಗ್ಗೆ 9:47ರ ಸುಮಾರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಬಂದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ನಾಯಿಯನ್ನು ಸೇಂಟ್ ಮೇರಿಸ್ ಜಂಕ್ಷನ್‌ನಿಂದ ಮಂಚಕಲ್ ಪ್ರದೇಶದ ಕಡೆಗೆ ಎಳೆದೊಯ್ಯುತ್ತಿರುವ ದೃಶ್ಯಗಳು ಕಂಡುಬಂದಿವೆ.ಕರ್ಕೇರ ಅವರು ತಮ್ಮ ದೂರಿನಲ್ಲಿ ಈ ಕೃತ್ಯವನ್ನು ಅಮಾನವೀಯ ಮತ್ತು ನಾಯಿಗೆ ತೀವ್ರವಾಗಿ ಹಾನಿ ಮಾಡುವ ಉದ್ದೇಶ ಎಂದು ವಿವರಿಸಿದ್ದಾರೆ. ಆತ ಬಹುಶಃ ನಾಯಿ ಸಾಯಿಯುವವರೆಗೂ ಎಳೆದಿದ್ದಾನೆ ಎಂದು ಅವರು ಹೇಳಿದರು. ತನಿಖೆ ವೇಳೆ ಕೊಂಬುಗುಡ್ಡೆ ಮೂಲದ ಖಾದರ್ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಹೀಗಾಗಿ, ಪೊಲೀಸರು ಆತನ ವಿರುದ್ಧ ಸೆಕ್ಷನ್ 325 ಬಿಎನ್‌ಎಸ್ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.